ಸುಮ್ಮನೆ ಕೂತಿದ್ದೆ ಇವತ್ತು ಆಫೀಸಿನಲ್ಲಿ... ಏನು ಕೆಲಸ ಇರ್ಲಿಲ್ಲ.... ಏನು ಬರೀಲಿ ಅಂತ ಕೂಡ ಹೊಳಿತ ಇರ್ಲಿಲ್ಲ... ಅದಿಕ್ಕೆ ನನ್ನ ನಾಗಮಲೈ ಚಾರಣದ ಬಗ್ಗೆ ಬರೆಯೋಣ ಅನಿಸ್ತು... ಬರೀತಿದ್ದೀನಿ. . . ಸುಮ್ಮನೆ ಓದಿಕೊಳ್ಳಿ....
ನಾನು B.Sc ಮಾಡ್ತಿದ್ದಾಗ ನಾಗಮಲೈ ಗೆ ಹೋಗಿದ್ದು.... ನಾನು ನನ್ನ ಫ್ರೆಂಡ್ ಪ್ರಸಾದ ಮತ್ತು ಮಧು, ಮೂರು ಜನ ಹೋಗಿದ್ವಿ... ಬಡ್ಡಿಮಗ ಪ್ರಸಾದ ಸರಿಯಾಗಿ ಪ್ಲಾನ್ ಮಾಡಲಿಲ್ಲ... ಅವ್ನು ಆಗ್ಲೇ ಒಂದು ಸಲ ನಾಗಮಲೈ ಗೆ ಹೋಗಿ ಬಂದಿದ್ದ, ಆದ್ದರಿಂದ ಅವ್ನ inputs ತುಂಬ ಮುಖ್ಯ ಆಗಿತ್ತು.... ನಾಗಮಲೈ ಇರೋದು ಮಲೈ ಮಹದೇಶ್ವರ ಬೆಟ್ಟದ ಹತ್ತಿರ... ಹತ್ತಿರ ಏನು ಅಲ್ಲ ದೂರಾನೆ... ಮಲೈ ಮಹದೇಶ್ವರ ಬೆಟ್ಟದ ತನಕ ನಿಮಗೆ ಬಸ್ ಫೆಸಿಲಿಟಿ ಇದೆ... ಕೊಳ್ಳೆಗಾಲದಿಂದ, ಮೈಸೂರಿಂದ, ಚಾಮರಾಜನಗರದಿಂದ ನಿಮಗೆ ಬಸ್ಸುಗಳು ಸಿಗುತ್ತವೆ.... ಮಲೈ ಮಹದೇಶ್ವರ ಬೆಟ್ಟದಿಂದ ನಟರಾಜ ಸರ್ವಿಸ್... ನಡೆದುಕೊಂಡೇ ಹೋಗ್ಬೇಕು.... ಬರೋಬ್ಬರಿ ೧೯ ಕಿ. ಮೀ. ಆಗತ್ತೆ... ಏಳು ಬೆಟ್ಟ ಹತ್ತಿ ಇಳಿಯಬೇಕು ನಾಗಮಲೈ ತಲುಪಲು... ಅವತ್ತು ನಾವು ಬೆಳಿಗ್ಗೆ ಸುಮಾರು ೯ ಗಂಟೆಗೆ ಹೊರಟ್ವಿ ಮೈಸೂರಿಂದ... ಪ್ರೈವೇಟ್ ಬಸ್... ಮಲೈ ಮಹದೇಶ್ವರ ಬೆಟ್ಟ ತಲುಪೋಕೆ ಕೊಳ್ಳೇಗಾಲ ದಾಟಿ ಹೋಗ್ಬೇಕು... ನಾವು ಮಲೈ ಮಹದೇಶ್ವರ ಬೆಟ್ಟ ತಲುಪಿದಾಗ ಸುಮಾರು ೨ ಗಂಟೆ ಮಧ್ಯಾನ ಆಗಿತ್ತು ಅನ್ಸತ್ತೆ... ಅಲ್ಲಿ ಇಳಿದು ಒಂದು ರೂಮು ಹಿಡಿದ್ವಿ ಬಾಡಿಗೆಗೆ... ರೂಮುಗಳಿಗೇನು ತೊಂದರೆ ಇಲ್ಲ... ಸಿಗತ್ವೆ... ಆಮೇಲೆ ಸ್ವಲ್ಪ ಫ್ರೆಶ್ ಆಗಿ ಊಟ ಮಾಡೋಕೆ ಹೋದ್ವಿ... ಅಷ್ಟು ಚೆನ್ನಾದ ಹೋಟೆಲ್ ಯಾವ್ದು ಇಲ್ಲ ಅಲ್ಲಿ... ಶೆಡ್ ಹೋಟೆಲ್ ಸಿಗತ್ವೆ ತುಂಬ... ತಮಿಳರು ಜಾಸ್ತಿ ಅಲ್ಲಿ... ಅವರುಗಳೇ ನಡಿಸ್ತಾರೆ ಹೋಟೆಲ್ಲುಗಳನ್ನ.... ಹೊಟ್ಟೆ ತುಂಬ ಹಸಿದಿತ್ತು... ಸಿಕ್ಕಿದ ಚಪಾತಿ ತಿಂದು ನಾಗಮಲೈ ಗೆ ಹೊರಟು ನಿಂತಾಗ ಮಧ್ಯಾನ ೩.೩೦ ಆಗಿತ್ತು... ಪ್ರಸಾದನ ಪ್ರಕಾರ ೩ ಗಂಟೆ ಸಾಕು ನಾಗಮಲೈ ಗೆ ಹೋಗಿ ವಾಪಾಸ್ ಆಗೋಕೆ... ಏನೇ ಅದ್ರು ನೀವು ಮಲೈ ಮಹದೇಶ್ವರ ಬೆಟ್ಟಕ್ಕೆ ವಾಪಸ್ ಬರಲೇ ಬೇಕು... ನಾಗಮಲೈ ಲಿ ನಿಮಗೆ ಉಳಿದುಕೊಳ್ಳೋಕೆ ವ್ಯವಸ್ಥೆ ಇಲ್ಲ...
ಸರಿ ನಾವು ಮೂರು ಮಂದಿ ಮಧ್ಯಾನ ೩.೩೦ ಕ್ಕೆ ಧೀರ ವೀರ ಜೋಕುಮಾರರಂತೆ ನಾಗಮಲೈ ಗೆ ಹೊರಟು ನಿಂತೆವು... ಸಂಪೂರ್ಣ ಕಾಡು ಹಾದಿ... ಬೆಟ್ಟದಿಂದ ಸ್ವಲ್ಪ ದೂರ ಕಾಲು ಹಾದಿ ಆಮೇಲೆ ಸ್ವಲ್ಪ ಕೆಳಗೆ ಇಳಿಯಬೇಕು... ನಂತರ ಶುರುವಾಗೋದೇ ನಾಗಮಲೈ ಚಾರಣದ ಹಾದಿ... ಸಂಪೂರ್ಣ ಹಸಿರು ತುಂಬಿದ ವನ ರಾಶಿಯ ನಡುವೆ ನಮ್ಮ ಪಯಣ... ದಾರಿಯಲ್ಲಿ ನಿಮಗೆ ದಂಡಿಯಾಗಿ ಸೋಲಿಗರ ಹಾಡಿಗಳು ಸಿಗುತ್ತವೆ... ಅಲ್ಲಿನ ಮಕ್ಕಳು ನಿಮ್ಮಲ್ಲಿ ಬಂದು ಕಾಸಿಗಾಗಿ ಮುಗಿ ಬೀಳುತ್ತವೆ... ಸ್ವಲ್ಪ ಇರಿಸು ಮುರಿಸಾದ್ರು ಕೂಡ ಆ ಮಕ್ಕಳ ಮುಗ್ದತೆ ಇಷ್ಟ ಆಗತ್ತೆ... ನಾವು ಬೆಟ್ಟದಿಂದ (ಮಲೈ ಮಹದೇಶ್ವರ ಬೆಟ್ಟವನ್ನು ಶಾರ್ಟ್ ಫಾರಂ ಮಾಡಿ ಬೆಟ್ಟ ಅನ್ನೋಣ) ಸ್ವಲ್ಪ ದೂರ ಹೊರಟ ಕೂಡಲೇ ಒಂದು ಸೋಲಿಗರ ಹಟ್ಟಿ ಕಾಣಿಸಿತು... ಆ ಮನೆಯ ಒಡತಿ ನಮ್ಮ ಮೂರು ಜನರನ್ನು ಒಂದು ರೀತಿ ವಿಚಿತ್ರವಾಗಿ ನೋಡ್ತಾ ನಿಂತಳು... ಯಾಕೆ ಅಂತ ತಿಳಿಲಿಲ್ಲ... ಮುಂದೆ ಹೊರಟ್ವಿ.... ದಾರಿ ಮಾತ್ರ ಅದ್ಭುತ ಆನಂದ ತಂದು ಕೊಡತ್ತೆ... ಎಲ್ಲೆಲ್ಲು ಹಸಿರು ಶುದ್ದವಾದ ಗಾಳಿ ಎಲ್ಲೋ ದೂರದಲ್ಲಿ ಕಾಣದ ಮೂಲೆಯಲ್ಲಿ ಇರೋ ಸೋಲಿಗರ ಹಟ್ಟಿಯಿಂದ ಕೇಳಿ ಬರುವ ತಮಿಳು ರೇಡಿಯೋ ಸಂಗೀತ (ನಾವು ಹೋಗುವಾಗ ರೋಜ ಚಿತ್ರದ ಹಾಡು ತೇಲಿ ಬರ್ತಾ ಇತ್ತು... ಎಂಥ ಆನಂದ ಅಂತೀರಾ) ಒಂದು ರೀತೀಲಿ ಹೇಳೋದಂದ್ರೆ ಸ್ವರ್ಗ ಅನ್ಬೋದು.... ಕುಳಿತು ದಣಿವಾರಿಸಿಕೊಳ್ಳೋಕೆ ನಮಗೆ ಸಮಯ ಇರ್ಲಿಲ್ಲ... ಆಗ್ಲೇ ನಾಗಮಲೈ ಗೆ ಹೋಗಿದ್ದ ಜನರೆಲ್ಲಾ ವಾಪಸ್ ಬರ್ತಾ ಇದ್ರು.... ಒಂದು ಕಡೆ ಹತ್ತು ನಿಮಿಷ ಕೂತು ಸ್ವಲ್ಪ ಸುಧಾರಿಸಿಕೊಂಡು ಮತ್ತೆ ಹೊರಟ್ವಿ... ದಾರಿಯಲ್ಲಿ ನಿಮಗೆ ಏಳು ಬೆಟ್ಟಗಳು ಸಿಗುತ್ತವೆ... ಎಲ್ಲಾ ಏಳು ಬೆಟ್ಟಗಳನ್ನು ಹತ್ತಿ ಇಳಿದರೆ ಸಿಗುವುದೇ ನಾಗಮಲೈ... ಒಂದು ಅದ್ಭುತ ಅನುಭವ ಕೊಡತ್ತೆ ಈ ಚಾರಣ...
ಸರಿಯಾಗಿ ಪ್ಲಾನ್ ಮಾಡದ ಕಾರಣ ನಮ್ಮಲ್ಲಿ ಸಾಕಷ್ಟು ನೀರು ಇರ್ಲಿಲ್ಲ... ತಗೊಂಡು ಹೋಗಿದ್ದ ೨ ಬಾಟಲ್ ನೀರು ತಗೊಂಡಿದ್ದ ಹಾಗೆ ಖಾಲಿ ಆಯಿತು... ಸರಿ ನೀರಿಗಾಗಿ ಒಬ್ಬ ಸೋಲಿಗರ ಮನೆ ಬಾಗಿಲು ಬಡಿದ್ವಿ... ಆಯಮ್ಮನಿಗೆ ನಾವು ಹೇಳಿದ್ದು ಅರ್ಥ ಆಗ್ತಾ ಇರ್ಲಿಲ್ಲ... ಹೇಗೋ ಮಾಡಿ ನೀರಿನ ಬಾಟಲಿ ತೋರಿಸಿ ನೀರು ಕೇಳಿದ್ವಿ... ಹೋಗಿ ತಂದು ಕೊಟ್ಟಳು... ಒಂದು ಕ್ಷಣ ನಮಗೆ ಶಾಕ್.... ನೀರು ಗಿಣಿ ಹಸಿರು ಬಣ್ಣದ್ದು... ಹೇಗೆ ಅಂತ ತಿಳಿಲಿಲ್ಲ... ಆಮೇಲೆ ತಿಳಿದದ್ದು ಅಲ್ಲೊಂದು ಬಾವಿ ಇದೆ ಅಲ್ಲಿಂದ ಇವ್ರು ನೀರು ತರ್ತಾರೆ ಅಂತ... ಹೋಗಿ ಬಗ್ಗಿ ನೋಡಿದ್ವಿ ಬಾವಿಲಿ... ಬಾವಿ ನೀರು ಪೂರ್ತಿ ಹಸಿರು... ಅಬ್ಬಾ.... ಬೇರೆ ದಾರಿ ಇರ್ಲಿಲ್ಲ ನೀರು ಬೇಕೆ ಬೇಕಿತ್ತು... ತುಂಬಿಸಿಕೊಂಡು ಹೊರಟ್ವಿ... ಕೊನೆಗೂ ಹಾಗು ಹೀಗೂ ಮಾಡಿ ನಾಗಮಲೈ ಮುಟ್ಟಿದಾಗ ಸಂಜೆ ೬.೩೦... ಸೂರ್ಯ ಆಗಲೇ ತನ್ನ ದಿನ ನಿತ್ಯದ ಕೆಲಸ ಕಾರ್ಯ ಮುಗಿಸಿ ಮನೆಗೆ ಜಾರುವ ಭರದಲ್ಲಿದ್ದ.... ಅಲ್ಲಿ ಎರಡು ಬಂಡೆಗಲ್ಲುಗಳು ಇವೆ... ಒಂದು ಹಾವಿನ ರೀತಿಯಲ್ಲಿ ಮತ್ತು ಇನ್ನೊಂದು ಶಿವಲಿಂಗದ ರೀತಿಯಲ್ಲಿ... ಅದಿಕ್ಕೆ ಆ ಬೆಟ್ಟಕ್ಕೆ ನಾಗಮಲೈ ಎಂದು ಹೆಸರು.....ಅಲ್ಲಿನ ಪೂಜಾರರಿಗೆ ಸಕ್ಕತ್ ಆಶ್ಚರ್ಯ ಆಯಿತು... ಇಷ್ಟು ಹೊತ್ತಲ್ಲಿ ಬಂದಿದೀವಿ ಅಂತ... "ಇಷ್ಟು ಹೊತ್ತಲ್ಲಿ ಇಲ್ಲಿಗೆ ಯಾರು ಬರಲ್ಲ... ನೀವೇನು ಈಗ ಬಂದಿದೀರಿ" ಅಂದರು... ನಮಗೆ ಒಂದು ಕಡೆ ಆಶ್ಚರ್ಯ ಮತ್ತೊಂದೆಡೆ ಭಯ ಕೂಡ ಆಯಿತು... ಯಾಕೆ ಕೇಳಿದ್ವಿ... "ಇಲ್ಲಿಂದ ಬೆಟ್ಟಕ್ಕೆ ವಾಪಾಸ್ ಹೋಗೋಕೆ ಆಗಲ್ಲ ಇಷ್ಟೊತ್ತಿನ ಮೇಲೆ... ಅದಿಕ್ಕೆ ಎಲ್ರೂ ಬೆಳಿಗ್ಗೆನೆ ಹೊರಟು ಇಲ್ಲಿಗೆ ಬಂದು ದರ್ಶನ ಮುಗಿಸಿ ಸಂಜೆ ವೇಳೆಗೆ ಬೆಟ್ಟ ಸೇರಿಕೊತಾರೆ" ಅಂದರು... ನಮಗೆ ಚಿಂತೆ ಕಾಡಲು ಶುರು ಆಯಿತು... ಇಲ್ಲಿ ಎಲ್ಲಾದರೂ ಉಳಿದುಕೊಳ್ಳೋಕೆ ವ್ಯವಸ್ಥೆ ಇದೇನಾ ಅಂತ ವಿಚಾರಿಸಿದೆವು... ನಮ್ಮ ದುರಾದೃಷ್ಟ ಅಂತ ಯಾವುದೇ ಅವಕಾಶ ಇರ್ಲಿಲ್ಲ.... ಅಲ್ಲಿನ ಪೂಜಾರಿಗೆ ಅಲ್ಲೇ ಕೆಳಗಿನ ಹಳ್ಳಿಯಲ್ಲಿ ಒಂದು ಮನೆ ಕಟ್ಟಿಕೊಟ್ಟಿದ್ರು.... ನಮಗೆ ಪೂಜೆ ಮಾಡಿಕೊಟ್ಟ ನಂತರ ದೇವಸ್ತಾನಕ್ಕೆ ಬೀಗ ಹಾಕಲಾಯ್ತು.... ನಮಗೆ ಬೇರೆ ದಾರಿನೇ ಇರ್ಲಿಲ್ಲ... ಬೆಟ್ಟಕ್ಕೆ ವಾಪಸ್ ಬರಲೇ ಬೇಕಿತ್ತು... ಕತ್ತಲಾಗ್ತಾ ಬಂತು... ನಿಜವಾದ ಮಜಾ ಈಗ ಶುರು ಆಯಿತು....
೬.೪೫ ಕ್ಕೆ ನಾಗಮಲೈ ಇಂದ ಬೆಟ್ಟಕ್ಕೆ ಹೋಗಬೇಕು ಅನ್ನೋ ಆಸೆ ಹೊತ್ತು ಹೊರಟೆವು... ನಾಗಮಲೈ ಇಳಿದು ಮತ್ತೊಂದು ಬೆಟ್ಟವನ್ನು ಕ್ರಮಿಸಿ ಇಳಿದಾಗ ಒಂದು ಹಳ್ಳಿ ಸಿಕ್ಕಿತು... ಮಲೈ ಮಹದೇಶ್ವರ ಸ್ವಾಮಿ ನಮ್ಮ ಪಾಲಿಗೆ ಇದ್ದರು ಆ ದಿನ ಅನಿಸ್ತು... ಯಾಕಂದ್ರೆ ಅಲ್ಲಿ ನಮಗೆ ಒಬ್ಬ ಸ್ಥಳೀಯ ಸೋಲಿಗ ಸಿಕ್ಕಿದ.... ಅವನು ಅವತ್ತು ಕಾಡಲ್ಲಿ ಹುಣಸೆಹಣ್ಣು ಕೀಳಲು ಬಂದಿದ್ದ... ಹುಣಸೆಹಣ್ಣು ಕಿತ್ತು ತನ್ನ ಜೊತೆಯಲ್ಲಿ ಬಂದಿದ್ದ ವ್ಯಕ್ತಿಯೊಂದಿಗೆ ಅದನ್ನು ಬೆಟ್ಟಕ್ಕೆ ಕಳಿಸಿ ತನ್ನ ಸಂಭಂದದ ಮನೆಯವರೊಂದಿಗೆ ಒಂದೆರಡು ಮಾತಾಡಲು ಕೂತ... ಹಾಗೆ ಮಾತಾಡ್ತಾ ಮಾತಾಡ್ತಾ ಹೊತ್ತು ಹೋಗಿದ್ದೆ ತಿಳಿಲಿಲ್ಲ ಅವನಿಗೆ... ಎಷ್ಟೇ ಕಷ್ಟವಾದರೂ ಬೆಟ್ಟ ತಲುಪಲೇ ಬೇಕಿತ್ತು ಅವನಿಗೆ ಆ ದಿನ.. ಏನು ಕೆಲಸವಿತ್ತೋ ಏನೋ... ಯಾರಾದರು ಜೊತೆಗಾರರು ಸಿಗ್ತಾರ ಕಾಡಲ್ಲಿ ನಡೆದು ಬೆಟ್ಟ ತಲುಪಲು ಅಂತ ಆ ಸೋಲಿಗ ಹುಡುಕ್ತ ಇದ್ದ... ನಮಗೆ ಯಾರಾದ್ರೂ ಸ್ಥಳೀಯರು, ದಾರಿಯ ಪರಿಚಯ ಚೆನ್ನಾಗಿ ತಿಳಿದವರು, ಕಾಡಿನ ಪ್ರಾಣಿಗಳ ಅರಿವಿದ್ದವರು, ಆಪತ್ತಿನಲ್ಲಿ ತಪ್ಪಿಸಿಕೊಳ್ಳಲು ಸಹಾಯ ಮಾಡುವವರು ಬೇಕಿತ್ತು... ದೇವರು ಸಿಕ್ಕಿದ ಹಾಗೆ ಆ ಸೋಲಿಗ ಸಿಕ್ಕಿದ... ಅವನ ಬಗ್ಗೆ ಮಾತಾಡ್ತಾ ಅವನ ಸಂಸಾರದ ಬಗ್ಗೆ ಮಾತಾಡ್ತಾ ಹೊರಟೆವು... ಆ ದಿನ ಹುಣ್ಣಿಮೆ... ಆಕಾಶದಲ್ಲಿ ತುಂಬು ಚಂದ್ರಮ ಹೊಳಿತಿದ್ದ.... ಕಾಡಿನ ದಾರಿಯಲ್ಲಿ ಬೆಳದಿಂಗಳು ಸಾರಾ ಸಗಟಾಗಿ ಚೆಲ್ಲಿತ್ತು... ನಡೆಯಲು ನಮಗೇನು ಕಷ್ಟ ಆಗ್ಲಿಲ್ಲ... ಕಾಲು ನೋವು ಏನು ಅನ್ನೋದು ನಮಗೆ ನೆನಪೇ ಆಗ್ಲಿಲ್ಲ... ಜೀವದ ಮೇಲಿನ ಭಯ ಹೆಚ್ಚಿತ್ತು.... ಯಾವುದಾದರು ಕಾಡು ಪ್ರಾಣಿ attack ಮಾಡಿದ್ರೆ ಏನು ಮಾಡೋದು ಅಂತ ಮನಸಲ್ಲಿ ಪ್ರತಿಯೊಬ್ಬರಿಗೂ ಭಯ ಆದ್ರೆ ಯಾರು ತೋರಿಸ್ಕೊಳ್ತಾ ಇರ್ಲಿಲ್ಲ... ಜೋರಾಗಿ ಮಾತಾಡೋಕು ಹೆದರಿಕೆ... ಯಾವುದಾದರು ಪ್ರಾಣಿ ಕೇಳಿಸ್ಕೊಂಡು ಬಂದು ಎಗರಿದರೆ ಏನು ಅಂತ... ನಗಬೇಡಿ ಆಯ್ತಾ... ದಾರೀಲಿ ಮೂರು ಕೊಳ ಸಿಗುತ್ತೆ... ಅತಿ ಹೆಚ್ಚು ಅಪಾಯಕಾರಿ ಜಾಗ ಅದು... ರಾತ್ರಿ ಹೊತ್ತು ಆನೆಗಳು ನೀರು ಕುಡಿಯಲು ಅಲ್ಲಿಗೆ ಬರುತ್ತವೆ... ಆ ಮೂರು ಕೊಳ ದಾಟಿದರೆ ಸ್ವಲ್ಪ ಆರಾಮ್ ಅಂತ ಆ ಸೋಲಿಗ ಹೇಳ್ದ... ಮಾತಾಡ್ತಾ ಮಾತಾಡ್ತಾ ಮೂರು ಕೊಳ ದಾಟಿದ್ವಿ.... ಸ್ವಲ್ಪ ಭಯ ಕಮ್ಮಿ ಆಯಿತು... ಪ್ರತಿಯೊಂದು ಬೆಟ್ಟದ ತುದಿಗೆ ಬಂದಾಗಲೂ ಮಲೈ ಮಹದೇಶ್ವರ ದೇವಸ್ತಾನದ ಗೋಪುರದ ಲೈಟುಗಳು ಕಾಣಿಸ್ತ ಇದ್ವು... ನಾವು ಹತ್ರ ಬಂತು ಹತ್ರ ಬಂತು ಅನ್ಕೊಂಡು ಹೆಜ್ಜೆ ಚುರುಕು ಮಾಡಿದ್ವಿ... ಕೊನೆಗೆ ಬೆಟ್ಟದ ಬಳಿಯ ಸೋಲಿಗರ ಮನೆಗೆ ಆ ಅಪತ್ಭಾಂಧವ ಕರೆದೊಯ್ದ... ನೋಡಿದ್ರೆ ಅದು ನಾವು ನಾಗಮಲೈ ಹೋಗುವಾಗ ನಮ್ಮನ್ನು ವಿಚಿತ್ರವಾಗಿ ನೋಡ್ತಿದ್ದ ಸೋಲಿಗಿತ್ತಿಯ ಮನೆ... ಅದೇ ಮನೆ... ಒಳಗೆ ಆ ಸೋಲಿಗಿತ್ತಿ ಕೇಳ್ತಾ ಇದ್ಲು..." ಓಯ್ ಮಧ್ಯಾನ ೪ ಕೆ ಮೂರು ಹೈಕ ಇತ್ಲಾಗ್ ನಾಗಮಲೈ ಗೆ ಹೋದ್ವು ... ಏನಾದ್ರು ಕಾಣಕತ್ತೇನು" ಅಂತ... ಆಕೆ ನಮ್ಮನ್ನೇ ಕೇಳ್ತಾ ಇರೋದು ಅಂತ ನಮಗೆ ತಿಳಿಯೋಕೆ ತಡ ಆಗ್ಲಿಲ್ಲ... " ನಾವೇ ರೀ.. ಬಂದ್ವಿ ವಾಪಸು" ಅಂತ ಕೂಗಿದ್ವಿ... ಆ ಸೋಲಿಗಿತ್ತಿ ಆಮೇಲೆ ನಮಗೆ ಮಜ್ಜಿಗೆ ಕುಡಿಯಲು ಕೊಟ್ಟಳು... ಮಜ್ಜಿಗೆ ಕುಡಿದು ಮತ್ತೆ ೩ ಕಿ.ಮೀ. ನಡೆದು ಬೆಟ್ಟ ಸೇರಿದಾಗ ರಾತ್ರಿ ೧೦.... ದಾಸೋಹ ಭವನದಲ್ಲಿ ಕೊನೆಯ ಪಂಕ್ತಿ ಊಟಕ್ಕೆ ಕೂರುವುದಿತ್ತು... ನಾವು ಸೇರಿಕೊಂಡೆವು ಅದ್ರಲ್ಲಿ... ಊಟ ಮಾಡಿ ಬಂದು ರೂಮಲ್ಲಿ ಮಲಗಿದಾಗ ಕಾಲು ಮಲಗಲು ನಿರಾಕರಿಸಿತು... ನಡೆದು ನಡೆದು ಅಭ್ಯಾಸವಾದ ಹಾಗೆ ಆಗಿಬಿಟ್ಟಿತ್ತು... ೫ ಗಂಟೇಲಿ ೩೮ ಕಿ.ಮೀ. ನಡೆದು ಬಂದಿದ್ದ ನಮ್ಮ ಸಾಧನೆ ಅಷ್ಟಿಷ್ಟಲ್ಲ... ಮಲಗಿದ ಮೇಲೆ ಏಳಲು ಕೂಡ ಆಗ್ತಾ ಇರ್ಲಿಲ್ಲ... ಮಾರನೆ ದಿನ ಬೆಳಿಗ್ಗೆ ಕಾಲು ಅಲುಗಾಡಿಸಲು ಆಗದಂತ ಪರಿಸ್ಥಿತಿ... ಏನಂತೀರಾ ಆ ಸೌಭಾಗ್ಯ... ಅಬ್ಬ ಈಗಲೂ ಕೂಡ ನೆನೆಸಿಕೊಂಡರೆ ಮೈ ಜುಮ್ ಅನ್ನುತ್ತೆ ಹಾಗು ಕುಶಿ ಆಗತ್ತೆ...
No comments:
Post a Comment