Tuesday, November 17, 2009

ನಾಕವೀ ಲೋಕ - ನಾಗಮಲೈ

ಸುಮ್ಮನೆ ಕೂತಿದ್ದೆ ಇವತ್ತು ಆಫೀಸಿನಲ್ಲಿ... ಏನು ಕೆಲಸ ಇರ್ಲಿಲ್ಲ.... ಏನು ಬರೀಲಿ ಅಂತ ಕೂಡ ಹೊಳಿತ ಇರ್ಲಿಲ್ಲ... ಅದಿಕ್ಕೆ ನನ್ನ ನಾಗಮಲೈ ಚಾರಣದ ಬಗ್ಗೆ ಬರೆಯೋಣ ಅನಿಸ್ತು... ಬರೀತಿದ್ದೀನಿ. . . ಸುಮ್ಮನೆ ಓದಿಕೊಳ್ಳಿ....

ನಾನು B.Sc ಮಾಡ್ತಿದ್ದಾಗ ನಾಗಮಲೈ ಗೆ ಹೋಗಿದ್ದು.... ನಾನು ನನ್ನ ಫ್ರೆಂಡ್ ಪ್ರಸಾದ ಮತ್ತು ಮಧು, ಮೂರು ಜನ ಹೋಗಿದ್ವಿ... ಬಡ್ಡಿಮಗ ಪ್ರಸಾದ ಸರಿಯಾಗಿ ಪ್ಲಾನ್ ಮಾಡಲಿಲ್ಲ... ಅವ್ನು ಆಗ್ಲೇ ಒಂದು ಸಲ ನಾಗಮಲೈ ಗೆ ಹೋಗಿ ಬಂದಿದ್ದ, ಆದ್ದರಿಂದ ಅವ್ನ inputs ತುಂಬ ಮುಖ್ಯ ಆಗಿತ್ತು.... ನಾಗಮಲೈ ಇರೋದು ಮಲೈ ಮಹದೇಶ್ವರ ಬೆಟ್ಟದ ಹತ್ತಿರ... ಹತ್ತಿರ ಏನು ಅಲ್ಲ ದೂರಾನೆ... ಮಲೈ ಮಹದೇಶ್ವರ ಬೆಟ್ಟದ ತನಕ ನಿಮಗೆ ಬಸ್ ಫೆಸಿಲಿಟಿ ಇದೆ... ಕೊಳ್ಳೆಗಾಲದಿಂದ, ಮೈಸೂರಿಂದ, ಚಾಮರಾಜನಗರದಿಂದ ನಿಮಗೆ ಬಸ್ಸುಗಳು ಸಿಗುತ್ತವೆ.... ಮಲೈ ಮಹದೇಶ್ವರ ಬೆಟ್ಟದಿಂದ ನಟರಾಜ ಸರ್ವಿಸ್... ನಡೆದುಕೊಂಡೇ ಹೋಗ್ಬೇಕು.... ಬರೋಬ್ಬರಿ ೧೯ ಕಿ. ಮೀ. ಆಗತ್ತೆ... ಏಳು ಬೆಟ್ಟ ಹತ್ತಿ ಇಳಿಯಬೇಕು ನಾಗಮಲೈ ತಲುಪಲು... ಅವತ್ತು ನಾವು ಬೆಳಿಗ್ಗೆ ಸುಮಾರು ೯ ಗಂಟೆಗೆ ಹೊರಟ್ವಿ ಮೈಸೂರಿಂದ... ಪ್ರೈವೇಟ್ ಬಸ್... ಮಲೈ ಮಹದೇಶ್ವರ ಬೆಟ್ಟ ತಲುಪೋಕೆ ಕೊಳ್ಳೇಗಾಲ ದಾಟಿ ಹೋಗ್ಬೇಕು... ನಾವು ಮಲೈ ಮಹದೇಶ್ವರ ಬೆಟ್ಟ ತಲುಪಿದಾಗ ಸುಮಾರು ೨ ಗಂಟೆ ಮಧ್ಯಾನ ಆಗಿತ್ತು ಅನ್ಸತ್ತೆ... ಅಲ್ಲಿ ಇಳಿದು ಒಂದು ರೂಮು ಹಿಡಿದ್ವಿ ಬಾಡಿಗೆಗೆ... ರೂಮುಗಳಿಗೇನು ತೊಂದರೆ ಇಲ್ಲ... ಸಿಗತ್ವೆ... ಆಮೇಲೆ ಸ್ವಲ್ಪ ಫ್ರೆಶ್ ಆಗಿ ಊಟ ಮಾಡೋಕೆ ಹೋದ್ವಿ... ಅಷ್ಟು ಚೆನ್ನಾದ ಹೋಟೆಲ್ ಯಾವ್ದು ಇಲ್ಲ ಅಲ್ಲಿ... ಶೆಡ್ ಹೋಟೆಲ್ ಸಿಗತ್ವೆ ತುಂಬ... ತಮಿಳರು ಜಾಸ್ತಿ ಅಲ್ಲಿ... ಅವರುಗಳೇ ನಡಿಸ್ತಾರೆ ಹೋಟೆಲ್ಲುಗಳನ್ನ.... ಹೊಟ್ಟೆ ತುಂಬ ಹಸಿದಿತ್ತು... ಸಿಕ್ಕಿದ ಚಪಾತಿ ತಿಂದು ನಾಗಮಲೈ ಗೆ ಹೊರಟು ನಿಂತಾಗ ಮಧ್ಯಾನ ೩.೩೦ ಆಗಿತ್ತು... ಪ್ರಸಾದನ ಪ್ರಕಾರ ೩ ಗಂಟೆ ಸಾಕು ನಾಗಮಲೈ ಗೆ ಹೋಗಿ ವಾಪಾಸ್ ಆಗೋಕೆ... ಏನೇ ಅದ್ರು ನೀವು ಮಲೈ ಮಹದೇಶ್ವರ ಬೆಟ್ಟಕ್ಕೆ ವಾಪಸ್ ಬರಲೇ ಬೇಕು... ನಾಗಮಲೈ ಲಿ ನಿಮಗೆ ಉಳಿದುಕೊಳ್ಳೋಕೆ ವ್ಯವಸ್ಥೆ ಇಲ್ಲ...

ಸರಿ ನಾವು ಮೂರು ಮಂದಿ ಮಧ್ಯಾನ ೩.೩೦ ಕ್ಕೆ ಧೀರ ವೀರ ಜೋಕುಮಾರರಂತೆ ನಾಗಮಲೈ ಗೆ ಹೊರಟು ನಿಂತೆವು... ಸಂಪೂರ್ಣ ಕಾಡು ಹಾದಿ... ಬೆಟ್ಟದಿಂದ ಸ್ವಲ್ಪ ದೂರ ಕಾಲು ಹಾದಿ ಆಮೇಲೆ ಸ್ವಲ್ಪ ಕೆಳಗೆ ಇಳಿಯಬೇಕು... ನಂತರ ಶುರುವಾಗೋದೇ ನಾಗಮಲೈ ಚಾರಣದ ಹಾದಿ... ಸಂಪೂರ್ಣ ಹಸಿರು ತುಂಬಿದ ವನ ರಾಶಿಯ ನಡುವೆ ನಮ್ಮ ಪಯಣ... ದಾರಿಯಲ್ಲಿ ನಿಮಗೆ ದಂಡಿಯಾಗಿ ಸೋಲಿಗರ ಹಾಡಿಗಳು ಸಿಗುತ್ತವೆ... ಅಲ್ಲಿನ ಮಕ್ಕಳು ನಿಮ್ಮಲ್ಲಿ ಬಂದು ಕಾಸಿಗಾಗಿ ಮುಗಿ ಬೀಳುತ್ತವೆ... ಸ್ವಲ್ಪ ಇರಿಸು ಮುರಿಸಾದ್ರು ಕೂಡ ಆ ಮಕ್ಕಳ ಮುಗ್ದತೆ ಇಷ್ಟ ಆಗತ್ತೆ... ನಾವು ಬೆಟ್ಟದಿಂದ (ಮಲೈ ಮಹದೇಶ್ವರ ಬೆಟ್ಟವನ್ನು ಶಾರ್ಟ್ ಫಾರಂ ಮಾಡಿ ಬೆಟ್ಟ ಅನ್ನೋಣ) ಸ್ವಲ್ಪ ದೂರ ಹೊರಟ ಕೂಡಲೇ ಒಂದು ಸೋಲಿಗರ ಹಟ್ಟಿ ಕಾಣಿಸಿತು... ಆ ಮನೆಯ ಒಡತಿ ನಮ್ಮ ಮೂರು ಜನರನ್ನು ಒಂದು ರೀತಿ ವಿಚಿತ್ರವಾಗಿ ನೋಡ್ತಾ ನಿಂತಳು... ಯಾಕೆ ಅಂತ ತಿಳಿಲಿಲ್ಲ... ಮುಂದೆ ಹೊರಟ್ವಿ.... ದಾರಿ ಮಾತ್ರ ಅದ್ಭುತ ಆನಂದ ತಂದು ಕೊಡತ್ತೆ... ಎಲ್ಲೆಲ್ಲು ಹಸಿರು ಶುದ್ದವಾದ ಗಾಳಿ ಎಲ್ಲೋ ದೂರದಲ್ಲಿ ಕಾಣದ ಮೂಲೆಯಲ್ಲಿ ಇರೋ ಸೋಲಿಗರ ಹಟ್ಟಿಯಿಂದ ಕೇಳಿ ಬರುವ ತಮಿಳು ರೇಡಿಯೋ ಸಂಗೀತ (ನಾವು ಹೋಗುವಾಗ ರೋಜ ಚಿತ್ರದ ಹಾಡು ತೇಲಿ ಬರ್ತಾ ಇತ್ತು... ಎಂಥ ಆನಂದ ಅಂತೀರಾ) ಒಂದು ರೀತೀಲಿ ಹೇಳೋದಂದ್ರೆ ಸ್ವರ್ಗ ಅನ್ಬೋದು.... ಕುಳಿತು ದಣಿವಾರಿಸಿಕೊಳ್ಳೋಕೆ ನಮಗೆ ಸಮಯ ಇರ್ಲಿಲ್ಲ... ಆಗ್ಲೇ ನಾಗಮಲೈ ಗೆ ಹೋಗಿದ್ದ ಜನರೆಲ್ಲಾ ವಾಪಸ್ ಬರ್ತಾ ಇದ್ರು.... ಒಂದು ಕಡೆ ಹತ್ತು ನಿಮಿಷ ಕೂತು ಸ್ವಲ್ಪ ಸುಧಾರಿಸಿಕೊಂಡು ಮತ್ತೆ ಹೊರಟ್ವಿ... ದಾರಿಯಲ್ಲಿ ನಿಮಗೆ ಏಳು ಬೆಟ್ಟಗಳು ಸಿಗುತ್ತವೆ... ಎಲ್ಲಾ ಏಳು ಬೆಟ್ಟಗಳನ್ನು ಹತ್ತಿ ಇಳಿದರೆ ಸಿಗುವುದೇ ನಾಗಮಲೈ... ಒಂದು ಅದ್ಭುತ ಅನುಭವ ಕೊಡತ್ತೆ ಈ ಚಾರಣ...

ಸರಿಯಾಗಿ ಪ್ಲಾನ್ ಮಾಡದ ಕಾರಣ ನಮ್ಮಲ್ಲಿ ಸಾಕಷ್ಟು ನೀರು ಇರ್ಲಿಲ್ಲ... ತಗೊಂಡು ಹೋಗಿದ್ದ ೨ ಬಾಟಲ್ ನೀರು ತಗೊಂಡಿದ್ದ ಹಾಗೆ ಖಾಲಿ ಆಯಿತು... ಸರಿ ನೀರಿಗಾಗಿ ಒಬ್ಬ ಸೋಲಿಗರ ಮನೆ ಬಾಗಿಲು ಬಡಿದ್ವಿ... ಆಯಮ್ಮನಿಗೆ ನಾವು ಹೇಳಿದ್ದು ಅರ್ಥ ಆಗ್ತಾ ಇರ್ಲಿಲ್ಲ... ಹೇಗೋ ಮಾಡಿ ನೀರಿನ ಬಾಟಲಿ ತೋರಿಸಿ ನೀರು ಕೇಳಿದ್ವಿ... ಹೋಗಿ ತಂದು ಕೊಟ್ಟಳು... ಒಂದು ಕ್ಷಣ ನಮಗೆ ಶಾಕ್.... ನೀರು ಗಿಣಿ ಹಸಿರು ಬಣ್ಣದ್ದು... ಹೇಗೆ ಅಂತ ತಿಳಿಲಿಲ್ಲ... ಆಮೇಲೆ ತಿಳಿದದ್ದು ಅಲ್ಲೊಂದು ಬಾವಿ ಇದೆ ಅಲ್ಲಿಂದ ಇವ್ರು ನೀರು ತರ್ತಾರೆ ಅಂತ... ಹೋಗಿ ಬಗ್ಗಿ ನೋಡಿದ್ವಿ ಬಾವಿಲಿ... ಬಾವಿ ನೀರು ಪೂರ್ತಿ ಹಸಿರು... ಅಬ್ಬಾ.... ಬೇರೆ ದಾರಿ ಇರ್ಲಿಲ್ಲ ನೀರು ಬೇಕೆ ಬೇಕಿತ್ತು... ತುಂಬಿಸಿಕೊಂಡು ಹೊರಟ್ವಿ... ಕೊನೆಗೂ ಹಾಗು ಹೀಗೂ ಮಾಡಿ ನಾಗಮಲೈ ಮುಟ್ಟಿದಾಗ ಸಂಜೆ ೬.೩೦... ಸೂರ್ಯ ಆಗಲೇ ತನ್ನ ದಿನ ನಿತ್ಯದ ಕೆಲಸ ಕಾರ್ಯ ಮುಗಿಸಿ ಮನೆಗೆ ಜಾರುವ ಭರದಲ್ಲಿದ್ದ.... ಅಲ್ಲಿ ಎರಡು ಬಂಡೆಗಲ್ಲುಗಳು ಇವೆ... ಒಂದು ಹಾವಿನ ರೀತಿಯಲ್ಲಿ ಮತ್ತು ಇನ್ನೊಂದು ಶಿವಲಿಂಗದ ರೀತಿಯಲ್ಲಿ... ಅದಿಕ್ಕೆ ಆ ಬೆಟ್ಟಕ್ಕೆ ನಾಗಮಲೈ ಎಂದು ಹೆಸರು.....ಅಲ್ಲಿನ ಪೂಜಾರರಿಗೆ ಸಕ್ಕತ್ ಆಶ್ಚರ್ಯ ಆಯಿತು... ಇಷ್ಟು ಹೊತ್ತಲ್ಲಿ ಬಂದಿದೀವಿ ಅಂತ... "ಇಷ್ಟು ಹೊತ್ತಲ್ಲಿ ಇಲ್ಲಿಗೆ ಯಾರು ಬರಲ್ಲ... ನೀವೇನು ಈಗ ಬಂದಿದೀರಿ" ಅಂದರು... ನಮಗೆ ಒಂದು ಕಡೆ ಆಶ್ಚರ್ಯ ಮತ್ತೊಂದೆಡೆ ಭಯ ಕೂಡ ಆಯಿತು... ಯಾಕೆ ಕೇಳಿದ್ವಿ... "ಇಲ್ಲಿಂದ ಬೆಟ್ಟಕ್ಕೆ ವಾಪಾಸ್ ಹೋಗೋಕೆ ಆಗಲ್ಲ ಇಷ್ಟೊತ್ತಿನ ಮೇಲೆ... ಅದಿಕ್ಕೆ ಎಲ್ರೂ ಬೆಳಿಗ್ಗೆನೆ ಹೊರಟು ಇಲ್ಲಿಗೆ ಬಂದು ದರ್ಶನ ಮುಗಿಸಿ ಸಂಜೆ ವೇಳೆಗೆ ಬೆಟ್ಟ ಸೇರಿಕೊತಾರೆ" ಅಂದರು... ನಮಗೆ ಚಿಂತೆ ಕಾಡಲು ಶುರು ಆಯಿತು... ಇಲ್ಲಿ ಎಲ್ಲಾದರೂ ಉಳಿದುಕೊಳ್ಳೋಕೆ ವ್ಯವಸ್ಥೆ ಇದೇನಾ ಅಂತ ವಿಚಾರಿಸಿದೆವು... ನಮ್ಮ ದುರಾದೃಷ್ಟ ಅಂತ ಯಾವುದೇ ಅವಕಾಶ ಇರ್ಲಿಲ್ಲ.... ಅಲ್ಲಿನ ಪೂಜಾರಿಗೆ ಅಲ್ಲೇ ಕೆಳಗಿನ ಹಳ್ಳಿಯಲ್ಲಿ ಒಂದು ಮನೆ ಕಟ್ಟಿಕೊಟ್ಟಿದ್ರು.... ನಮಗೆ ಪೂಜೆ ಮಾಡಿಕೊಟ್ಟ ನಂತರ ದೇವಸ್ತಾನಕ್ಕೆ ಬೀಗ ಹಾಕಲಾಯ್ತು.... ನಮಗೆ ಬೇರೆ ದಾರಿನೇ ಇರ್ಲಿಲ್ಲ... ಬೆಟ್ಟಕ್ಕೆ ವಾಪಸ್ ಬರಲೇ ಬೇಕಿತ್ತು... ಕತ್ತಲಾಗ್ತಾ ಬಂತು... ನಿಜವಾದ ಮಜಾ ಈಗ ಶುರು ಆಯಿತು....

೬.೪೫ ಕ್ಕೆ ನಾಗಮಲೈ ಇಂದ ಬೆಟ್ಟಕ್ಕೆ ಹೋಗಬೇಕು ಅನ್ನೋ ಆಸೆ ಹೊತ್ತು ಹೊರಟೆವು... ನಾಗಮಲೈ ಇಳಿದು ಮತ್ತೊಂದು ಬೆಟ್ಟವನ್ನು ಕ್ರಮಿಸಿ ಇಳಿದಾಗ ಒಂದು ಹಳ್ಳಿ ಸಿಕ್ಕಿತು... ಮಲೈ ಮಹದೇಶ್ವರ ಸ್ವಾಮಿ ನಮ್ಮ ಪಾಲಿಗೆ ಇದ್ದರು ಆ ದಿನ ಅನಿಸ್ತು... ಯಾಕಂದ್ರೆ ಅಲ್ಲಿ ನಮಗೆ ಒಬ್ಬ ಸ್ಥಳೀಯ ಸೋಲಿಗ ಸಿಕ್ಕಿದ.... ಅವನು ಅವತ್ತು ಕಾಡಲ್ಲಿ ಹುಣಸೆಹಣ್ಣು ಕೀಳಲು ಬಂದಿದ್ದ... ಹುಣಸೆಹಣ್ಣು ಕಿತ್ತು ತನ್ನ ಜೊತೆಯಲ್ಲಿ ಬಂದಿದ್ದ ವ್ಯಕ್ತಿಯೊಂದಿಗೆ ಅದನ್ನು ಬೆಟ್ಟಕ್ಕೆ ಕಳಿಸಿ ತನ್ನ ಸಂಭಂದದ ಮನೆಯವರೊಂದಿಗೆ ಒಂದೆರಡು ಮಾತಾಡಲು ಕೂತ... ಹಾಗೆ ಮಾತಾಡ್ತಾ ಮಾತಾಡ್ತಾ ಹೊತ್ತು ಹೋಗಿದ್ದೆ ತಿಳಿಲಿಲ್ಲ ಅವನಿಗೆ... ಎಷ್ಟೇ ಕಷ್ಟವಾದರೂ ಬೆಟ್ಟ ತಲುಪಲೇ ಬೇಕಿತ್ತು ಅವನಿಗೆ ಆ ದಿನ.. ಏನು ಕೆಲಸವಿತ್ತೋ ಏನೋ... ಯಾರಾದರು ಜೊತೆಗಾರರು ಸಿಗ್ತಾರ ಕಾಡಲ್ಲಿ ನಡೆದು ಬೆಟ್ಟ ತಲುಪಲು ಅಂತ ಆ ಸೋಲಿಗ ಹುಡುಕ್ತ ಇದ್ದ... ನಮಗೆ ಯಾರಾದ್ರೂ ಸ್ಥಳೀಯರು, ದಾರಿಯ ಪರಿಚಯ ಚೆನ್ನಾಗಿ ತಿಳಿದವರು, ಕಾಡಿನ ಪ್ರಾಣಿಗಳ ಅರಿವಿದ್ದವರು, ಆಪತ್ತಿನಲ್ಲಿ ತಪ್ಪಿಸಿಕೊಳ್ಳಲು ಸಹಾಯ ಮಾಡುವವರು ಬೇಕಿತ್ತು... ದೇವರು ಸಿಕ್ಕಿದ ಹಾಗೆ ಆ ಸೋಲಿಗ ಸಿಕ್ಕಿದ... ಅವನ ಬಗ್ಗೆ ಮಾತಾಡ್ತಾ ಅವನ ಸಂಸಾರದ ಬಗ್ಗೆ ಮಾತಾಡ್ತಾ ಹೊರಟೆವು... ಆ ದಿನ ಹುಣ್ಣಿಮೆ... ಆಕಾಶದಲ್ಲಿ ತುಂಬು ಚಂದ್ರಮ ಹೊಳಿತಿದ್ದ.... ಕಾಡಿನ ದಾರಿಯಲ್ಲಿ ಬೆಳದಿಂಗಳು ಸಾರಾ ಸಗಟಾಗಿ ಚೆಲ್ಲಿತ್ತು... ನಡೆಯಲು ನಮಗೇನು ಕಷ್ಟ ಆಗ್ಲಿಲ್ಲ... ಕಾಲು ನೋವು ಏನು ಅನ್ನೋದು ನಮಗೆ ನೆನಪೇ ಆಗ್ಲಿಲ್ಲ... ಜೀವದ ಮೇಲಿನ ಭಯ ಹೆಚ್ಚಿತ್ತು.... ಯಾವುದಾದರು ಕಾಡು ಪ್ರಾಣಿ attack ಮಾಡಿದ್ರೆ ಏನು ಮಾಡೋದು ಅಂತ ಮನಸಲ್ಲಿ ಪ್ರತಿಯೊಬ್ಬರಿಗೂ ಭಯ ಆದ್ರೆ ಯಾರು ತೋರಿಸ್ಕೊಳ್ತಾ ಇರ್ಲಿಲ್ಲ... ಜೋರಾಗಿ ಮಾತಾಡೋಕು ಹೆದರಿಕೆ... ಯಾವುದಾದರು ಪ್ರಾಣಿ ಕೇಳಿಸ್ಕೊಂಡು ಬಂದು ಎಗರಿದರೆ ಏನು ಅಂತ... ನಗಬೇಡಿ ಆಯ್ತಾ... ದಾರೀಲಿ ಮೂರು ಕೊಳ ಸಿಗುತ್ತೆ... ಅತಿ ಹೆಚ್ಚು ಅಪಾಯಕಾರಿ ಜಾಗ ಅದು... ರಾತ್ರಿ ಹೊತ್ತು ಆನೆಗಳು ನೀರು ಕುಡಿಯಲು ಅಲ್ಲಿಗೆ ಬರುತ್ತವೆ... ಆ ಮೂರು ಕೊಳ ದಾಟಿದರೆ ಸ್ವಲ್ಪ ಆರಾಮ್ ಅಂತ ಆ ಸೋಲಿಗ ಹೇಳ್ದ... ಮಾತಾಡ್ತಾ ಮಾತಾಡ್ತಾ ಮೂರು ಕೊಳ ದಾಟಿದ್ವಿ.... ಸ್ವಲ್ಪ ಭಯ ಕಮ್ಮಿ ಆಯಿತು... ಪ್ರತಿಯೊಂದು ಬೆಟ್ಟದ ತುದಿಗೆ ಬಂದಾಗಲೂ ಮಲೈ ಮಹದೇಶ್ವರ ದೇವಸ್ತಾನದ ಗೋಪುರದ ಲೈಟುಗಳು ಕಾಣಿಸ್ತ ಇದ್ವು... ನಾವು ಹತ್ರ ಬಂತು ಹತ್ರ ಬಂತು ಅನ್ಕೊಂಡು ಹೆಜ್ಜೆ ಚುರುಕು ಮಾಡಿದ್ವಿ... ಕೊನೆಗೆ ಬೆಟ್ಟದ ಬಳಿಯ ಸೋಲಿಗರ ಮನೆಗೆ ಆ ಅಪತ್ಭಾಂಧವ ಕರೆದೊಯ್ದ... ನೋಡಿದ್ರೆ ಅದು ನಾವು ನಾಗಮಲೈ ಹೋಗುವಾಗ ನಮ್ಮನ್ನು ವಿಚಿತ್ರವಾಗಿ ನೋಡ್ತಿದ್ದ ಸೋಲಿಗಿತ್ತಿಯ ಮನೆ... ಅದೇ ಮನೆ... ಒಳಗೆ ಆ ಸೋಲಿಗಿತ್ತಿ ಕೇಳ್ತಾ ಇದ್ಲು..." ಓಯ್ ಮಧ್ಯಾನ ೪ ಕೆ ಮೂರು ಹೈಕ ಇತ್ಲಾಗ್ ನಾಗಮಲೈ ಗೆ ಹೋದ್ವು ... ಏನಾದ್ರು ಕಾಣಕತ್ತೇನು" ಅಂತ... ಆಕೆ ನಮ್ಮನ್ನೇ ಕೇಳ್ತಾ ಇರೋದು ಅಂತ ನಮಗೆ ತಿಳಿಯೋಕೆ ತಡ ಆಗ್ಲಿಲ್ಲ... " ನಾವೇ ರೀ.. ಬಂದ್ವಿ ವಾಪಸು" ಅಂತ ಕೂಗಿದ್ವಿ... ಆ ಸೋಲಿಗಿತ್ತಿ ಆಮೇಲೆ ನಮಗೆ ಮಜ್ಜಿಗೆ ಕುಡಿಯಲು ಕೊಟ್ಟಳು... ಮಜ್ಜಿಗೆ ಕುಡಿದು ಮತ್ತೆ ೩ ಕಿ.ಮೀ. ನಡೆದು ಬೆಟ್ಟ ಸೇರಿದಾಗ ರಾತ್ರಿ ೧೦.... ದಾಸೋಹ ಭವನದಲ್ಲಿ ಕೊನೆಯ ಪಂಕ್ತಿ ಊಟಕ್ಕೆ ಕೂರುವುದಿತ್ತು... ನಾವು ಸೇರಿಕೊಂಡೆವು ಅದ್ರಲ್ಲಿ... ಊಟ ಮಾಡಿ ಬಂದು ರೂಮಲ್ಲಿ ಮಲಗಿದಾಗ ಕಾಲು ಮಲಗಲು ನಿರಾಕರಿಸಿತು... ನಡೆದು ನಡೆದು ಅಭ್ಯಾಸವಾದ ಹಾಗೆ ಆಗಿಬಿಟ್ಟಿತ್ತು... ೫ ಗಂಟೇಲಿ ೩೮ ಕಿ.ಮೀ. ನಡೆದು ಬಂದಿದ್ದ ನಮ್ಮ ಸಾಧನೆ ಅಷ್ಟಿಷ್ಟಲ್ಲ... ಮಲಗಿದ ಮೇಲೆ ಏಳಲು ಕೂಡ ಆಗ್ತಾ ಇರ್ಲಿಲ್ಲ... ಮಾರನೆ ದಿನ ಬೆಳಿಗ್ಗೆ ಕಾಲು ಅಲುಗಾಡಿಸಲು ಆಗದಂತ ಪರಿಸ್ಥಿತಿ... ಏನಂತೀರಾ ಆ ಸೌಭಾಗ್ಯ... ಅಬ್ಬ ಈಗಲೂ ಕೂಡ ನೆನೆಸಿಕೊಂಡರೆ ಮೈ ಜುಮ್ ಅನ್ನುತ್ತೆ ಹಾಗು ಕುಶಿ ಆಗತ್ತೆ...

Monday, November 9, 2009

ವಿಚಿತ್ರ ಅನ್ಸಿದ್ರೂ ಕೂಡ ಸತ್ಯ, ಸ್ನೇಹ ಅನ್ನೋದೇ ಒಂದು ರೀತಿ ಚಟ... ಅಂಟುಕೊಂಡ್ರೆ ಬಿಡಿಸೋಕ್ಕಾಗಲ್ಲ.... ಸ್ನೇಹದ ಬಗ್ಗೆ ಸ್ನೇಹಿತರ ಬಗ್ಗೆ ಬರೀಬೇಕು ಅಂತ ಕೂತಿದೀನಿ.... ನಮ್ಮ ಗುಬ್ಬಿ(ವೀಣಾ) ತಲೇಲಿ ಇಂತದೊಂದು ಯೋಚನೆ ಯಾವಾಗ ಬಂತೋ ಗೊತ್ತಿಲ್ಲ... ಆದ್ರೆ ಒಂದು ರೀತಿ ಒಳ್ಳೆ ಯೋಚನೇನೆ ಅಲ್ವ.... ಸ್ನೇಹ ಅನ್ನೋದು ನಿಂತಿರೋದು ಯಾವ್ದರ ಮೇಲೆ.... ಯಾಕೆ ಈ ಪ್ರಶ್ನೆ ಅಂದ್ರೆ ಎಲ್ಲ ಸ್ನೇಹ ಯಶಸ್ವಿ ಆಗಲ್ಲ.... ಕೆಲವು ಆರಂಭದಲ್ಲೇ ಮುರಿದು ಬೀಳ್ತವೆ... ಕೆಲವು ಮಧ್ಯದಲ್ಲಿ ಕೈ ಕೊಡ್ತವೆ... ಇನ್ನು ಕೆಲವು ಸ್ವಲ್ಪ ದಿನ ಮುಖ ನೋಡ್ದೆ ಇದ್ರೆ ಕಳೆದೊಗ್ತವೆ... ಮತ್ತು ಕೆಲವು ಸಣ್ಣ ಪುಟ್ಟ ಜಗಳ ಜೂಟಿಗಳಿಂದ ಅಂತ್ಯ ಕಾಣ್ತವೆ... ಹೀಗೆ..... ದಿನ ಕಳೆದು ವರ್ಷ ಆಗಿ ವರ್ಷ ಹತ್ತಾಗಿ ಸಮಯ ಸರಿದ್ರೂ ಕೊಣೆಗಾಣದೆ ಉಳ್ಕೊಲೋ ಸ್ನೇಹ ಅಥವಾ ಸ್ನೇಹಿತರು ಬೆರಳೆನಿಕೆ ಮಾತ್ರ... ಅವರೆಲ್ಲರ ಸ್ನೇಹ ಯಾಕೆ ಮುರಿದು ಬೀಳತ್ತೆ... ಅದರ ಬುನಾದಿ ಯಾಕೆ ಗಟ್ಟಿ ಇಲ್ಲ ಅಂತ ಕಾಡೋ ಪ್ರಶ್ನೇನೆ ಅಲ್ವ ಅದು... ಅದಿಕ್ಕೆ ಕೇಳಿದ್ದು ನಿಮಗೆ, ಸ್ನೇಹ ನಿಂತಿರೋದು ಯಾವದರ ಮೇಲೆ ಅಂತ.... ಒಂದು forward ಮೇಲ್ ಬಂದಿತ್ತು... ಸ್ನೇಹಿತರು ಯಾಕೆ ದೂರಗ್ತಾರೆ ಅಂತ...

  • ಮೊದಲು ಇವನು ಅಥವಾ ಇವಳು, ಅವನು ಅಥವಾ ಅವಳು ಬ್ಯುಸಿ ಇರ್ಬೋದು ಸುಮ್ನೆ ಡಿಸ್ಟರ್ಬ್ ಮಾಡೋದು ಬೇಡ ಅನ್ಕೊತಾರೆ... ಅನ್ಕೊಂಡು ಕಾಲ್ ಮಾಡಲ್ಲ....
  • ದಿನ ಕಳೆದಂತೆ ಅವನ್ಯಾಕೆ ಕಾಲ್ ಮಾಡಲಿಲ್ಲ ಅಂತ ತಲೆ ಕೆಡಿಸ್ಕೊತಾರೆ...
  • ಕ್ರಮೇಣ ನಾನ್ಯಾಕೆ ಮಾಡಬೇಕು ಅವನು ಅಥವಾ ಅವಳೇ ಮಾಡ್ಲಿ ಅಂತ ಹಠ ಹಿಡ್ಕೋತಾರೆ...
  • ಇಲ್ಲಿ ಸ್ನೇಹಿತನ ಮೇಲಿನ ಪ್ರೀತಿ ಕೋಪಕ್ಕೆ ತಿರಗತ್ತೆ
  • ಆಮೇಲೆ ಅವನು ಮಾಡೋ ತನಕ ನಾನು ಕಾಲ್ ಮಾಡಲ್ಲ ಅಂತ ಹಿಡಿದ ಹಠ ದ್ವೇಷಕ್ಕೆ ಪರಿವರ್ತನೆ ಆಗತ್ತೆ..
  • ಸುಂದರವಾದ ಸ್ನೇಹ ಇಲ್ಲಿ ಕೊನೆಗಾಣತ್ತೆ

ನಿಜ ಅಲ್ವ ಅದು... ಒಂದು ಚಿಕ್ಕ ಹಠ..... ಒಂದು ಚಿಕ್ಕ ಮುಂಗೋಪ ಅಮೂಲ್ಯವಾದ ಅದ್ಭುತವಾದ ಸ್ನೇಹಾನ ಬಲಿ ತಗೊಂಡು ಬಿಡತ್ತೆ.... ಯಾಕೆ... ಮನುಷ್ಯ ಒಂದು ಸಂಬಂಧ ಕಾಪಾಡಿಕೊಳ್ಳಲಾಗದಷ್ಟು ಬಲಹೀನ ಆದನ??? ಅಥವಾ ಅವ್ನ ಮನಃಶಕ್ತಿ ದುರ್ಬಲ ಆಯ್ತಾ??? ಮತ್ತೆ ಪ್ರಶ್ನೆ.... ಜೀವನ ಅಂದ್ರೆ ಪ್ರಶ್ನೆ, ಪ್ರಶ್ನೆ ಇಲ್ಲದ್ದು ಜೀವನಾನೆ ಅಲ್ಲ ಅನ್ನೋಷ್ಟು ಪ್ರಶ್ನೆಗಳು ಜೀವನದಲ್ಲಿ ಬೆಸದುಕೊಂಡು ಬಿಟ್ಟಿವೆ... "Friend is a second wife" ಅಂತಾರೆ, ಅದು ಎಷ್ಟು ನಿಜ ಅನ್ನೋದು ತುಂಬ ಹಚ್ಕೊಂಡಿರೋ ಸ್ನೇಹಿತರನ್ನ ಕೇಳಿದ್ರೆ ಅರ್ಥ ಆಗತ್ತೆ.... ಫ್ರೆಂಡ್ ನು ಕೂಡ ಹೆಂಡತಿ ತರ ನೆ ಟ್ರೀಟ್ ಮಾಡೋದು ನಾವು... ನಾವು ಅನ್ಕೊಂಡ್ ಹಾಗೆ ಅವನು ಇರ್ಬೇಕು, ನಮ್ಮನ್ನ ಬಿಟ್ಟು ಬೇರೆಯವರ ಜೊತೆ ಸಲಿಗೆ ಇರಬಾರದು... ನಮ್ಮನ್ನ ಬಿಟ್ಟು ದೂರ ಇರಬಾರದು... ಯಾವಾಗಲು ನಾವು ಇಡೋ ಹೆಜ್ಜೆಯಲ್ಲಿ ಜೊತೆ ಹೆಜ್ಜಯನಿಡುತ್ತ ಜೊತೆಯಾಗಿ ಬರಬೇಕು, ಹೀಗೆ ಸಾಕಷ್ಟು expectation ಇಟ್ಕೊತೀವಿ.... ಆದ್ರೆ ಅವರಿಗೂ ಒಂದು ಪ್ರೈವೇಟ್ ಲೈಫ್ ಇದೆ ಅಂತ ಯಾವತ್ತು ಥಿಂಕ್ ಮಾಡಲ್ಲ... ಅಲ್ವ... 10 ನಿಮಿಷ ಕೂತು ಯೋಚನೆ ಮಾಡಿ... ನಿಮ್ಮ ಫ್ರೆಂಡ್ ಹತ್ರ ಈ ವಿಚಾರವಾಗಿ ಎಷ್ಟು ಕಿತ್ತಾಡಿದೀರ ಅಂತ ಆಗ ನಿಮಗೆ ಅನ್ಸತ್ತೆ ಇದು ನಿಜ ಅಂತ... ಜಗತ್ತೆಲ್ಲ ನೀನೆ ಅಂದುಕೊಳ್ಳೋ ನಾವು ಅವನಿಗೂ ಕೂಡ ಒಂದು ಬೇರೆ ಜಗತ್ತು ಇದೆ, ಅಲ್ಲಿ ನಮ್ಮ ಹಾಗೆ ಅವನಿಗಾಗಿ ಕೆಲವು ಮಂದಿ ಕಾಯ್ತಾ ಇದಾರೆ ಅನ್ನೋದನ್ನ ಕಲ್ಪನೆ ಮಾಡಿಕೊಳ್ಳೋಕು ಕಷ್ಟ ಪಡ್ತೀವಿ... ಇದನ್ನೇ ಮನಃಶಾಸ್ತ್ರಜ್ಞರು ಯಾವುದಾದರು ಫೋಬಿಯ ಗೆ ಹೋಲಿಸ್ತಾರೆ.....

ಇದು ಒಂದು ರೀತಿ... ಇನ್ನೊಂದು ಇದೆ... ಸ್ವಲ್ಪ ಜೀರ್ಣ ಮಾಡಿಕೊಳ್ಳೋಕೆ ಕಷ್ಟ ಅನಿಸುವಂತದ್ದು..... ಜನ ನಿಜವಾಗಲು ಬದಲಾಗ್ತಾರೆ... ವರ್ಷದಿಂದ ಹಿಡಿದು ಕಾಪಿಟ್ಟುಕೊಂಡಿದ್ದ ಸ್ನೇಹ ಕ್ಷಣದಲ್ಲಿ ಬಿದ್ದು ಒಡೆದು ಹೋಗೋ ಪಿಂಗಾಣಿ ವಸ್ತು ಆಗಿಬಿಡತ್ತೆ... ಅಂತವರ ಬಗ್ಗೆ ನನ್ನದೇನು ಕಾಮೆಂಟ್ಸ್ ಇಲ್ಲ... ಕಾಲ ಎಲ್ಲಾನೂ ತಿಳ್ಸತ್ತೆ ಕಲ್ಸತ್ತೆ ಅಷ್ಟು ಮಾತ್ರ ಹೇಳೋಕೆ ಸಾದ್ಯ...ಇದು ಕೂಡ ಒಂದು ಫೋಬಿಯ ನೆ...

ನನ್ನ ಪ್ರಕಾರ ಸ್ನೇಹ ನಿಂತಿರೋದು ನಂಬಿಕೆ ಮೇಲೆ... trust ಅಂತೀವಲ್ಲ ಅದು..... ಒಬ್ಬರು ಇನ್ನೊಬ್ಬರನ್ನ ನಂಬದೆ ಇದ್ರೆ ಅದು ಯಾವುದೇ ಸಂಬಂಧ ಅದರೂ ಕೂಡ ನಿಲ್ಲೋದಿಲ್ಲ... ಏನಂತೀರಿ????

ಹಿಂದೊಂದು ಕಾಲ ಇತ್ತು.... ಟಿ.ವಿ.ಲಿ ಸಿನಿಮಾ ಲಿ ಕಥೆ ಲಿ ಕೇಳ್ತಾ ಇದ್ವಿ..... ಮುಂದೊಂದು ದಿನ ಬರತ್ತೆ, ಸಂಬಂಧಗಳಿಗೆ ಅರ್ಥ ಇರಲ್ಲ... ಗಂಡ ಹೆಂಡತಿ ನ ಹೆಂಡತಿ ಗಂಡನ್ನ ಕೊಲೆ ಮಾಡ್ಸೋ ಕಾಲ.... ತಾಯಿ ಮಗನ, ಮಗ ತಂದೆ ನ ನಂಬದೆ ಇರೋ ಕಾಲ.... ಜಗತ್ತಲ್ಲಿ ಪಾಪಿಗಳೇ ತುಂಬಿ ಹೋಗ್ತಾರೆ....ಆಗ ಭಗವಂತ ಮತ್ತೆ ಅವತಾರ ಎತ್ತಿ ಬರ್ತಾನೆ ಲೋಕದಲ್ಲಿ ಅನೀತಿ ಅಶಾಂತಿ ಅಧರ್ಮ ಅಳಿಸಿ ಶಾಂತಿ ನೆಮ್ಮದಿ ತಂದ್ಕೊಡ್ತಾನೆ ಅಂತ....ಯೋಚಿಸಿ ನೋಡಿದ್ರೆ ನಿಮಗೆ ಆ ಕಾಲ ಇನ್ನು ಬರಬೇಕು ಅನಿಸ್ತ ಇದೇನಾ??? .... ಆಗ್ಲೇ ಬಂದಾಗಿದೆ.... ಆದ್ರೆ ಶಾಂತಿ ನೆಮ್ಮದಿ ತಂದುಕೊಡೋ ಭಗವಂತ ಯಾವಾಗ ಬರ್ತಾನೋ ತಿಳಿತಿಲ್ಲ.... ಮೊನ್ನೆ ಮೊನ್ನೆ ಕೇಳಿದ್ವಲ್ಲ, ಗಂಡ ಹೆಂಡತಿ ಮತ್ತು ಮಗು ಕೊಲೆ ಆಗಿದ್ದು.... ಮಾಡಿದ್ದೂ ಯಾರು ಅಲ್ಲ, ಅವ್ನ ಮನೆ ಕೆಲಸದ ಆಳು.... ಸ್ವಾಮಿ ಭಕ್ತಿಗೆ ಹೆಸರಾದ ದೇಶ ನಮ್ದು.... ಆದ್ರೆ ಈಗ ನಡಿತಿರೋದು ಏನು... ನಿಮಗೊಂದು ವಿಷ್ಯ ಹೇಳ್ತೀನಿ... ಹಿಂದಿನ ಕಾಲದಲ್ಲಿ ರಾಜರು ತಮ್ಮ ಅಂತಃಪುರದಿಂದ ಸುರಂಗ ತೊಡಿಸ್ತ ಇದ್ರೂ... ಎಮರ್ಜೆನ್ಸಿ ಲಿ ಕೆಲ್ಸಕ್ಕೆ ಬರತ್ತೆ ಅಂತ... ಯಾವ್ದಾದ್ರು ಶತ್ರು ಪಡೆ attack ಮಾಡ್ದಾಗ ಪ್ರಯೋಜನ ಆಗತ್ತೆ ಅಂತ... ಆ ಸುರಂಗ ತೋಡೋ ವ್ಯಕ್ತಿ, ಅವ್ನ teamಮತ್ತು ರಾಜಂಗೆ ಮಾತ್ರ ತಿಳಿತ ಇತ್ತು ಆ ಸುರಂಗದ ಬಗ್ಗೆ.... ಸುರಂಗದ ಕೆಲಸ ಎಲ್ಲ ಮುಗಿದ ಮೇಲೆ ಆ ವ್ಯಕ್ತಿ ಮತ್ತು ಅವ್ನ team suicide ಮಾಡ್ಕೋತ ಇದ್ರು.... ಸುರಂಗದ ವಿಷ್ಯ ಬೇರೆಯವರಿಗೆ ತಿಳಿದೇ ಇರ್ಲಿ ಅಂತ.... ರಾಜನ ಮೇಲಿನ ಭಯಕ್ಕಿಂತ ಇಲ್ಲಿ ರಾಜ ಭಕ್ತಿ ಹೆಚ್ಚು ಕೆಲಸ ಮಾಡತ್ತೆ... ಸುರಂಗ ಮುಗಿದ ಮೇಲೆ ತಾನು ಸಾಯ್ತೀನಿ ಅಂತ ತಿಳಿದರು ಕೂಡ ಆ ವ್ಯಕ್ತಿ ಅಲ್ಲಿ ಕೆಲಸ ಮಾಡ್ತಾ ಇದ್ದ... ಇಂತದೊಂದು ಅವಕಾಶ ಸಿಕ್ಕಿದ್ದು ತನ್ನ ಪುಣ್ಯ ಅಂತ ಭಾವಿಸ್ತ ಇದ್ದ...ಆದ್ರೆ ಈಗ ..... ಕೆಲಸ ಕೊಟ್ಟ ಧಣಿ ತನ್ನ ಕೆಲಸಗಾರನಿಂದ ಕೊಲೆ ಆಗ್ತಾನೆ... ಮುದ್ದು ಮುದ್ದಾಗಿ ಓಡಾಡಿಕೊಂಡಿದ್ದ ಅವ್ನ ಮಗು ಹೆಣವಾಗತ್ತೆ.... ಜೀವನ ಪೂರ್ತಿ ಜೊತೆಯಾಗಿ ಬಾಳಲು ಬಂದ ಅವ್ನ ಹೆಂಡತಿ ರಕ್ತದ ಮಡುವಲ್ಲಿ ಮಲಗ್ತಾಳೆ... ಮೊನ್ನೆ ಒಂದು news ನೋಡ್ದೆ... ತಾಯಿ suicide ಮಾಡ್ಕೊಂಡ್ಲು ಅಂತ... ಕಾರಣ ಗೊತ್ತ ನಿಮಗೆ... ಅವಳ lover ಜೊತೆ ಅವಳ ಮಗಳು ಓಡಿಹೋದಳು ಅಂತ... ಸಂಬಂಧ ಗಳಿಗೆ ಅರ್ಥ ಇಲ್ಲ... ಹೊರಗಡೆ ಹೋದ ಮಗು ಸೇಫ್ ಆಗಿ ವಾಪಾಸ್ ಬಂದ್ರೆ ತಾಯಿ ಖುಷಿ ಪಡ್ತಾಳೆ... ಯಾಕಂದ್ರೆ ಹೊರಗಡೆ ಹೋಗೋ ಯಾರೇ ಅದ್ರು ಸೇಫ್ ಆಗಿ ವಾಪಾಸ್ ಬರೋ ನಂಬಿಕೆ ತುಂಬ ಕಮ್ಮಿ ಆಗಿದೆ... ಮನುಷ್ಯ ಎಲ್ಲಿ ಎಡಿವಿದ ಅಂತ ವಿಚಾರ ಮಾಡಬೇಕಾಗಿದೆ...ಅದಕ್ಕಿಂತ ಹೆಚ್ಚಾಗಿ ಕೆಟ್ಟಿರೋ ಜನರನ್ನ ಸರಿ ಮಾಡಬೇಕಾಗಿದೆ... ಇದು ಆಗೋ ವಿಚಾರ ಅಲ್ಲ ಅಂತ ಎಲ್ರಿಗೂ ಗೊತ್ತು...

ನಮ್ಮ ಪೂರ್ವಿಕರು ಎಲ್ಲದಕ್ಕೂ ಒಂದು ಬೇಲಿ ಅಂತ ಹಾಕಿದ್ದರು... ಆಗ ಎಲ್ಲ ಸರಿಯಾಗಿತ್ತು.... ರೀತಿ ನೀತಿ ಅಂತ ನೋಡ್ತಾ ಇದ್ರು... ಯಾರು ಏನ್ ಮಾಡಬೇಕು ಯಾರ್ಯಾರು ಹೇಗ್ ಇರ್ಬೇಕು ಅಂತ ತಿಳಿಸ್ತಿದ್ರು.... ಮೂಢನಂಬಿಕೆ ಕೂಡ ಕೆಲವು ಇದ್ವು ಆದ್ರೆ ಅದಕ್ಕಿಂತ ಹೆಚ್ಚಾಗಿ ಸಮಾಜದಲ್ಲಿ ನೆಮ್ಮದಿ ಇತ್ತು... ಸಂಬಂಧಕ್ಕೆ ಅರ್ಥ ಇತ್ತು ಬೆಲೆ ಇತ್ತು.... ಆದ್ರೆ ಈಗ ನಾವು ಹೈ ಎಂಡ್ ಸೊಸೈಟಿ ಲಿ ಎಷ್ಟು ಬೆಳ್ದಿದೀವಿ ಅಂದ್ರೆ ಮದುವೆ ಆದ ಮೇಲೆ ನಡಿಯೋ ಸಮಾಚಾರ ಎಲ್ಲ ಈಗ ಪಬ್ಲಿಕ್ ಆಗೋಗಿದೆ... ಇಬ್ರು ಹುಡುಗರು ಇಲ್ಲ ಇಬ್ರು ಹುಡುಗಿಯರು ಸೇರಿದ್ರೆ ಬಹುಷಃ ಈ ವಿಷ್ಯ ಬಂದ್ರು ಬರತ್ತೆ... ನಿಸ್ಸಂಕೋಚವಾಗಿ ಅದ್ರ ಬಗ್ಗೆ ನಾವು ಮಾತಾಡುವಷ್ಟು ಬೆಳ್ದಿದೀವಿ... ನಿಮಗೆ ನೆನಪಿದೇನೋ ಏನೋ ಗೊತ್ತಿಲ್ಲ... whisper ಮೊದಲ ಸಲ ಮಾರ್ಕೆಟ್ ಗೆ ಬಂದಾಗ ಅದ್ರ ಬಗ್ಗೆ advertise ಮಾಡೋಕು ಕೂಡ ಸಂಕೋಚ ಪಟ್ಟಿದ್ರು.... ರೇಣುಕ ಸಹಾನೆ ಬಂದು " ನಿಮಗೆ ಒಂದು ವಿಷ್ಯ ಹೇಳೋದಿದೆ.. ಆದ್ರೆ ಹೇಗೆ ಹೇಳಲಿ ಅಂತ ತಿಳೀತಿಲ್ಲ" ಅಂತ ಸಂಕೋಚದಿಂದ advertise ಮಾಡಿದ್ದು ಇನ್ನು ನೆನಪಿದೆ... ಆದ್ರೆ ಈಗ IPL ಇಂದ ಹಿಡಿದು I-Pill ನ ವರೆಗೂ ಮಾತಾಡುವಷ್ಟು ಸೊಸೈಟಿ ಬೆಳದಿದೆ... ಕಾಲ ಕೆಟ್ಟಿಲ್ಲ.... ಜನ ಕೆಟ್ಟಿದಾರೆ.... technology ಬೆಳಿತಾ ಬೆಳಿತಾ ಮನುಷ್ಯ ತನಗಿಂತ ಮಿಗಿಲಾದದ್ದು ಬೇರೆ ಏನು ಇಲ್ಲ ಅನ್ಕೊಂಡಿದಾನೆ.... ಆದ ಹೊಸ ಅವಿಷ್ಕಾರನೆಲ್ಲ personal benifit ಗೆ ಬಳಸ್ಕೋತ ಇದಾನೆ... ಮನುಷ್ಯಂಗೆ ಇರೋ ಒಂದು big problem ಅಂದ್ರೆ ದುರಾಸೆ... ಎಷ್ಟೂ ಸಾಲದು ಅನ್ನೋ ಮನೋಭಾವ... ಅದು ಹೋಗೋ ತನಕ 80% problem solve ಆಗಲ್ಲ.... ಆಗೆಲ್ಲ ದುರಾಸೆ ಅನ್ನೋದು ತುಂಬ ದೂರದ ಮಾತು ಅನ್ನೋ ಹಾಗಿತ್ತು... ಮನೇಲಿ ಒಂದು ಮದುವೆ ಆದ್ರೆ ಊರವರೆಲ್ಲ ಮನೆಗೊಬ್ಬರಂತೆ ಬಂದು ಕೆಲಸ ಮಾಡ್ತಾ ಇದ್ರು... ಭತ್ತ ಕುಟ್ಟೋದು ಕಾರದ ಪುಡಿ ಮಾಡೋದು ಬೇಳೆ ಸೋಸಿಡೋದು ಹುಣಸೆ ಹಣ್ಣು ಮುದ್ದೆ ಮಾಡೋದು ಅದು ಇದು ಅಂತ ಸಾಕಷ್ಟು ಕೆಲಸ ಕಾರ್ಯದಲ್ಲಿ ಭಾಗಿ ಆಗ್ತಾ ಇದ್ರು .... ಈಗಿನ ವಿಚಾರ ನಿಮಗೆ ಹೇಳಬೇಕಾಗಿಲ್ಲ... ಮನೆ ಮಂದೀನೇ ಅವತ್ತಿನ ದಿನ ಬಂದು ತಿಂದು ಟಾಟಾ ಮಾಡಿ ಹೋಗ್ತಾರೆ....ಹೀಗಿರುವಾಗ ಒಗ್ಗಟ್ಟು ಅನ್ನೋ ಪದ ಎಲ್ಲಿ ಬರತ್ತೆ... so ಅದೊಂದು ಪದ out.... ಹಾಗಂತ ಹಿಂದೆ ದುರಾಸೆ ಇರ್ಲಿಲ್ಲ ಒಗ್ಗಟ್ಟು ಜಾಸ್ತಿ ಇತ್ತು ಕೆಟ್ಟದ್ದು ಅನ್ನೋದು ಇರಲೇ ಇರ್ಲಿಲ್ಲ ಅಂತ ನಾನು ಹೇಳ್ತಾ ಇಲ್ಲ ಆದ್ರೆ percentage ಕಮ್ಮಿ ಇತ್ತು.... ಈಗ ಅದ್ರ ಉಲ್ಟಾ ಆಗಿದೆ.... ಪ್ರಪಂಚಕ್ಕೆ ಬೇಲಿ ಹಾಕೋಕೆ ಒಬ್ಬ ಕೃಷ್ಣ ಬರಬೇಕಿದೆ...ಬರೀತಾ ಕೂತರೆ 200 ಪೇಜ್ ಆದರು ಮುಗಿದೇ ಇರೋ ಬ್ಲಾಗ್ ಇದು... ಸದ್ಯಕ್ಕೆ ಮುಗ್ಸೋಣ...